20 Liter Milk Giving Deshi Cow: ದಿನಕ್ಕೆ 15-20 ಲೀಟರ್ ಹಾಲು ನೀಡುವ ದೇಸಿ ತಳಿ ಹಸುಗಳ ಸಂವರ್ಧನೆ ನಡೆಯುತ್ತಿದೆ. ಸ್ಥಳೀಯ ತಳಿಗಳ ಹಾಲು ಉತ್ಪಾದನೆ ಹೆಚ್ಚಿಸಿ ರೈತರಿಗೆ ಹೆಚ್ಚಿನ ಲಾಭ ನೀಡುವ ಯೋಜನೆ ಇದು…
ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯಲ್ಲಿ (Dairy Farming) ದೊಡ್ಡ ಮಟ್ಟದ ಬದಲಾವಣೆ ಕಂಡುಬAದಿದೆ. ಹೆಚ್ಚು ಹಾಲು ನೀಡುವ ಹಸುಗಳತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಇದೇ ಕಾರಣದಿಂದ ದೇಸಿ ತಳಿ (ಜವಾರಿ) ಹಸುಗಳು ಮಯವಾಗಿ, ಜೆರ್ಸಿ ಮತ್ತು ಎಚ್ಎಫ್ ತಳಿಗಳು ಮನೆಮನೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿವೆ.
ಆದರೆ ದೇಸಿ ಹಸುಗಳು ಕೇವಲ ಹಾಲು ನೀಡುವ ಪ್ರಾಣಿ ಮಾತ್ರವಲ್ಲ; ಅವು ಗ್ರಾಮೀಣ ಕೃಷಿ ಆರ್ಥಿಕತೆಯ (Rural Agro Economy) ಪ್ರಮುಖ ಆಧಾರವಾಗಿವೆ. ಈ ಹಿನ್ನೆಲೆಯಲ್ಲೇ ಕನೇರಿಮಠ ಮಹತ್ವಾಕಾಂಕ್ಷಿ ಪ್ರಯೋಗವೊಂದನ್ನು ಕೈಗೊಂಡಿದೆ.
ದೇಸಿ ಹಸುಗಳ ಮಹತ್ವ
ಕಳೆದ ಮೂರು ದಶಕಗಳಲ್ಲಿ ಜೆರ್ಸಿ ಮತ್ತು ಹೋಲ್ಸ್ಟೀನ್ ಫ್ರೀಸಿಯನ್ (HF – Holstein Friesian) ತಳಿಗಳ ಸಾಕಣೆ ಹೆಚ್ಚಾಗಿದೆ. ಇದರ ಪ್ರಮುಖ ಕಾರಣ ದಿನಕ್ಕೆ 15-25 ಲೀಟರ್ಗಳಷ್ಟು ಹಾಲು ನೀಡುವ ಸಾಮರ್ಥ್ಯ. ದೇಸಿ ತಳಿಗಳು ಹೆಚ್ಚೆಂದರೆ 4-5 ಲೀಟರ್ ಹಾಲು ನೀಡುತ್ತವೆ ಎಂಬ ನಂಬಿಕೆ ರೈತರಲ್ಲಿ ಬೇರೂರಿದೆ.
ಆದರೆ ದೇಸಿ ಹಸುಗಳ ಮಹತ್ವವನ್ನು ನಿರ್ಲಕ್ಷ್ಯ ಮಾಡಲಾಗುವುದಿಲ್ಲ. ಅವು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುತ್ತವೆ. ಕಡಿಮೆ ಆಹಾರದಲ್ಲಿಯೇ ಬದುಕುತ್ತವೆ. ರೋಗನಿರೋಧಕ ಶಕ್ತಿ ((Immunity) ಹೆಚ್ಚು.
ದೇಸಿ ಹಸುಗಳ ಗೋಮಯ, ಗೋಮೂತ್ರ ಕೃಷಿಗೆ ಉಪಯುಕ್ತ. ಮಾತ್ರವಲ್ಲ ನೈಸರ್ಗಿಕ ಕೃಷಿಗೆ ಅತ್ಯಂತ ಪೂರಕ. ಈ ಎಲ್ಲಾ ಅಂಶಗಳನ್ನು ಮನಗಂಡು, ದೇಸಿ ತಳಿಗಳನ್ನು ಉಳಿಸಿ, ಅವುಗಳ ಹಾಲು ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಕನೇರಿಮಠ ಕಾರ್ಯಪ್ರವೃತ್ತವಾಗಿದೆ.
ಇದನ್ನೂ ಓದಿ: Sarakari Jameenu Sakrama: ಸರ್ಕಾರಿ ಜಮೀನು ಸಕ್ರಮ ಹೇಗೆ? ರೈತರಿಗೆ ಸಂಪೂರ್ಣ ಮಾರ್ಗದರ್ಶಿ
ದೇಸಿ ಹಸುಗಳು ಮತ್ತೆ ವಿಜೃಂಭಿಸಬೇಕು
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ದೇಸಿ ಹಸುಗಳ ಸಂವರ್ಧನೆ (Breed Development) ಕಾರ್ಯ ಆರಂಭವಾಗಿದೆ. ‘ದೇಸಿ ಹಸುಗಳು ಮತ್ತೆ ರೈತರ ಮನೆಗಳಲ್ಲಿ ವಿಜೃಂಭಿಸಬೇಕು’ ಎಂಬ ಆಶಯವೇ ಈ ಯೋಜನೆಯ ಮೂಲ ಚಿಂತನೆ.
ಕನೇರಿಮಠದಲ್ಲಿ ಸುಮಾರು 1,500ಕ್ಕೂ ಅಧಿಕ ದೇಸಿ ಹಸುಗಳ ಗೋಶಾಲೆ (Goshala) ಇದೆ. ಇದರಲ್ಲಿ ಈಗಾಗಲೇ 37 ಹಸುಗಳ ಮೇಲೆ ವಿಶೇಷ ಸಂಶೋಧನಾ ಪ್ರಯೋಗ ನಡೆದಿದೆ.
ಹೇಗಿರಲಿದೆ ಈ ವೈಜ್ಞಾನಿಕ ಪ್ರಯೋಗ? (Scientific Breeding Process)
ಈ ಯೋಜನೆಯ ಮುಖ್ಯ ಉದ್ದೇಶ ದಿನಕ್ಕೆ ಕನಿಷ್ಠ 15-20 ಲೀಟರ್ ಹಾಲು ನೀಡುವ ದೇಸಿ ಹಸುಗಳನ್ನು ಅಭಿವೃದ್ಧಿಪಡಿಸುವುದಾಗಿದೆ.
1. ವಿಶೇಷ ಎಗ್ ತಯಾರಿ (High Yield Embryo Preparation)
ದೇಸಿ ತಳಿಯ ಉತ್ತಮ ಗುಣಲಕ್ಷಣಗಳಿರುವ ಹಸುಗಳಿಂದ (High Genetic Merit Cows) ವಿಶೇಷ ಎಗ್ಗಳನ್ನು (Embryos) ತಯಾರಿಸಲಾಗುತ್ತದೆ. ಇದಕ್ಕಾಗಿ ಕನೇರಿಮಠದಲ್ಲಿ ಅತ್ಯಾಧುನಿಕ ಪ್ರಯೋಗಾಲಯ (Modern Laboratory) ಸ್ಥಾಪಿಸಲಾಗಿದೆ.
ಈ ಪ್ರಯೋಗಾಲಯದಲ್ಲಿ ಪಶು ವೈದ್ಯ ತಜ್ಞರು, ಸಹಾಯಕ ವೈದ್ಯರು, ತರಬೇತಿ ಪಡೆದ ಸಿಬ್ಬಂದಿ, ಆಧುನಿಕ ಉಪಕರಣಗಳು ಎಲ್ಲವೂ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ.
2. ಗರ್ಭದಲ್ಲಿ ಎಗ್ ಅಳವಡಿಕೆ (Embryo Transfer Technology)
ಗರ್ಭಧಾರಣೆಗೆ ಸಿದ್ಧವಾಗಿರುವ ದೇಸಿ ಹಸುಗಳ ಗರ್ಭದಲ್ಲಿ ಈ ಎಗ್ಗಳನ್ನು ಅಳವಡಿಸಲಾಗುತ್ತದೆ. ಇದನ್ನು (Embryo Transfer Technology – ETT) ಎಂದು ಕರೆಯುತ್ತಾರೆ.
ಈ ತಂತ್ರಜ್ಞಾನದ ವಿಶೇಷತೆ ಏನೆಂದರೆ ದೇಸಿ ಹಸುವಿನ ಗರ್ಭದಲ್ಲಷ್ಟೇ ಅಲ್ಲ, ಇತರೆ ತಳಿಯ ಹಸುಗಳ ಗರ್ಭದಲ್ಲೂ ಅಳವಡಿಸಿದರೂ ಜನಿಸುವ ಕರು ದೇಸಿ ತಳಿಯದ್ದಾಗಿರುತ್ತದೆ. ಈ ಮೂಲಕ ಜನಿಸುವ ಹೆಣ್ಣು ಕರುಗಳು ಭವಿಷ್ಯದಲ್ಲಿ ಹೆಚ್ಚು ಹಾಲು ನೀಡುವ ಸಾಮರ್ಥ್ಯ ಹೊಂದಿರುತ್ತವೆ.
ಯಾವ ದೇಸಿ ತಳಿಗಳಿಗೆ ಆದ್ಯತೆ?
ಸಾಮಾನ್ಯವಾಗಿ ದೇಸಿ ಹಸು ಎಂದರೆ ಗುಜರಾತ್ ಮೂಲದ ‘ಗಿರ್’ ತಳಿ ಕಣ್ಮುಂದೆ ಬರುತ್ತದೆ. ಆದರೆ ಕನೇರಿಮಠ ವಿವಿಧ ಪ್ರದೇಶೀಯ ತಳಿಗಳಿಗೆ ಆದ್ಯತೆ ನೀಡುತ್ತಿದೆ:
- ಕಿಲಾರಿ
- ಮಲೆನಾಡು ಗಿಡ್ಡ
- ಸಿಂಧಿ
- ರೆಡ್ ಸಿಂಧಿ
ಈ ತಳಿಗಳು ಸ್ಥಳೀಯ ಪರಿಸರಕ್ಕೆ ಸೂಕ್ತವಾಗಿದ್ದು, ಅವುಗಳಲ್ಲಿ ಹಾಲು ಉತ್ಪಾದನೆ ಹೆಚ್ಚಿಸುವ ಗುರಿ ಇಡಲಾಗಿದೆ.

ಇದನ್ನೂ ಓದಿ: NADEP Compost Guide: ಸಗಣಿ ಗೊಬ್ಬರವನ್ನು ಬಳಸುವ ವೈಜ್ಞಾನಿಕ ವಿಧಾನ | ಹೀಗೆ ಬಳಸಿದರೆ ಸಿಗಲಿದೆ ಹತ್ತಾರು ಲಾಭ
ಗ್ರಾಮ ಮಟ್ಟದಲ್ಲಿ ಸೇವೆ (Village Level Implementation)
ರೈತರು ತಮ್ಮ ಹಸುಗಳ ಹಾಲು ಉತ್ಪಾದನೆ ಹೆಚ್ಚಿಸಬೇಕೆಂದು ಬಯಸಿದರೆ, ಕನೇರಿಮಠ ಗ್ರಾಮ ಮಟ್ಟದಲ್ಲಿಯೇ ಸೇವೆ ನೀಡಲು ಮುಂದಾಗಿದೆ.
ಒಂದು ಗ್ರಾಮದಲ್ಲಿ ಕನಿಷ್ಠ 100 ಹಸುಗಳನ್ನು ಗುರುತಿಸಬೇಕು. ತಜ್ಞರ ತಂಡ ಗ್ರಾಮಕ್ಕೆ ಭೇಟಿ ನೀಡುತ್ತದೆ. ಹಸುಗಳ ಆರೋಗ್ಯ ತಪಾಸಣೆ (Health Check-up) ಮಾಡಲಾಗುತ್ತದೆ.
ಅಗತ್ಯ ಲಸಿಕೆ (Vaccination) ನೀಡಲಾಗುತ್ತದೆ. ಗರ್ಭಧಾರಣೆಗೆ ಸಿದ್ಧವಾದ ಹಸುಗಳಿಗೆ ಒಂದೇ ದಿನ ಎಗ್ ಅಳವಡಿಕೆ. ಈ ಮೂಲಕ ಹಸುಗಳ ಗುಣಮಟ್ಟ ಹೆಚ್ಚಿಸಿ, ರೈತರಿಗೆ ನೇರ ಲಾಭ ನೀಡುವ ವ್ಯವಸ್ಥೆ ರೂಪಿಸಲಾಗಿದೆ.
ಯಶಸ್ಸಿನ ಪ್ರಮಾಣ ಮತ್ತು ಭವಿಷ್ಯದ ಗುರಿ
ಈ ಪ್ರಯೋಗದ ಪ್ರಾರಂಭಿಕ ಯಶಸ್ಸಿನ ಪ್ರಮಾಣ ಸುಮಾರು 24% ಎಂದು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 80%ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಪ್ರತಿ ಹಸುವಿಗೆ ಎಗ್ ಅಳವಡಿಕೆ ವೆಚ್ಚವನ್ನು ಕನಿಷ್ಠ ₹15,000 ಒಳಗೆ ಇಡುವ ಚಿಂತನೆಯಿದೆ. ಇದರಿಂದ ಸಣ್ಣ ಹಾಗೂ ಮಧ್ಯಮ ರೈತರೂ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ದೇಸಿ ಹಸುಗಳ ಆರ್ಥಿಕ ಮತ್ತು ಕೃಷಿ ಮಹತ್ವ
ದೇಸಿ ಹಸುಗಳು ಕೇವಲ ಹಾಲಿನ ಮೂಲವಲ್ಲ. ಅವು ನೈಸರ್ಗಿಕ ಕೃಷಿಗೆ (Organic Farming) ಬೆಂಬಲವಾಗಿವೆ. ಇವುಗಳ ಗೋಮಯದಿಂದ ಜೀವಾಮೃತ ತಯಾರಿಸಬಹುದು.
ಜವಾರಿ ಹಸುಗಳ ನಿರ್ವಹಣೆಗೆ ಕಡಿಮೆ ವೈದ್ಯಕೀಯ ವೆಚ್ಚ ಸಾಕು. ದೀರ್ಘಾಯುಷ್ಯ. ಕಡಿಮೆ ನಿರ್ವಹಣಾ ವೆಚ್ಚ ಇರುವುದರಿಂದ ಹೆಚ್ಚು ಹಾಲು ನೀಡುವ ದೇಸಿ ಹಸುಗಳು ಲಭ್ಯವಾದರೆ, ರೈತರಿಗೆ ದ್ವಿಗುಣ ಲಾಭ ಸಿಗಲಿದೆ. ಹೆಚ್ಚಿನ ಹಾಲು ಮತ್ತು ಕಡಿಮೆ ಖರ್ಚು.
ರೈತರಿಗೆ ಆಗುವ ಲಾಭಗಳು
- ದಿನಕ್ಕೆ 15-20 ಲೀಟರ್ ಹಾಲು
- ಸ್ಥಳೀಯ ಹವಾಮಾನಕ್ಕೆ ಹೊಂದಿಕೆ
- ಉತ್ತಮ ಆರೋಗ್ಯ
- ದೀರ್ಘಕಾಲಿಕ ಆದಾಯ
- ದೇಸಿ ತಳಿ ಸಂರಕ್ಷಣೆ
ಈ ಯೋಜನೆ ಯಶಸ್ವಿಯಾದರೆ, ದೇಸಿ ಹಸುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಜೊತೆಗೆ, ಗ್ರಾಮೀಣ ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ (Dairy Revolution) ಸಂಭವಿಸಬಹುದು.
ಇದನ್ನೂ ಓದಿ: Land Podi Guide: ಪೋಡಿ ಎಂದರೇನು? ಏಕೆ ಮಾಡಿಸಬೇಕು? ರೈತರಿಗೆ ಸಂಪೂರ್ಣ ಮಾರ್ಗದರ್ಶಿ
ಇದು ದೇಸಿ ತಳಿ ಪುನರುಜ್ಜೀವನ ಚಳುವಳಿ
ಹೆಚ್ಚು ಹಾಲು ನೀಡುತ್ತವೆ ಎಂಬ ಕಾರಣಕ್ಕೆ ದೇಸಿ ಹಸುಗಳನ್ನು ಬಿಟ್ಟುಬಿಡುವುದು ಸರಿಯಲ್ಲ. ಅವುಗಳಲ್ಲಿ ಅಡಗಿರುವ ಜೈವಿಕ ಶಕ್ತಿ, ಪರಿಸರ ಹೊಂದಾಣಿಕೆ ಮತ್ತು ಕೃಷಿ ಪೂರಕ ಗುಣಗಳನ್ನು ಮರೆಯಲು ಸಾಧ್ಯವಿಲ್ಲ.
ದಿನಕ್ಕೆ 15-20 ಲೀಟರ್ ಹಾಲು ನೀಡುವ ದೇಸಿ ಹಸುಗಳನ್ನು ಅಭಿವೃದ್ಧಿಪಡಿಸುವ ಕನೇರಿಮಠ ಯತ್ನ ಯಶಸ್ವಿಯಾದರೆ, ಇದು ಕೇವಲ ಒಂದು ಪ್ರಯೋಗವಾಗಿರದೆ, ದೇಸಿ ತಳಿ ಪುನರುಜ್ಜೀವನ ಚಳುವಳಿ (Indigenous Breed Revival Movement) ಆಗಿ ರೂಪುಗೊಳ್ಳಲಿದೆ.
ರೈತರು, ವಿಜ್ಞಾನಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕೈಜೋಡಿಸಿದಾಗ ಗ್ರಾಮೀಣ ಆರ್ಥಿಕತೆಯಲ್ಲಿ ಎಂತಹ ಬದಲಾವಣೆ ಸಾಧ್ಯವೆಂಬುದಕ್ಕೆ ಇದು ಉತ್ತಮ ಉದಾಹರಣೆ. ಭವಿಷ್ಯದಲ್ಲಿ ದೇಸಿ ಹಸುಗಳೇ ರೈತರ ಮನೆಮನೆಗಳಲ್ಲಿ ಮತ್ತೆ ವಿಜೃಂಭಿಸುವ ದಿನಗಳು ದೂರದಲ್ಲಿಲ್ಲ ಎಂಬ ವಿಶ್ವಾಸ ಮೂಡಿದೆ. ಈ ಪ್ರಯೋಗ ಯಶಸ್ವಿಯಾಗಲೆಂದು ಆಶೀಸೋಣ…
ನಮ್ಮೆಲ್ಲ ರೈತ ಭಾಂದವರಿಗೆ ಅತ್ಯುತ್ತಮ ಮಾಹಿತಿ ದೊರೆಯುತ್ತವೆ.
ನಿಮಗೆ ಧನ್ಯವಾದಗಳು 🙏😊